ಭಟ್ಕಳ, ಡಿಸೆಂಬರ್ 7 : ರವಿವಾರ ಸಂಜೆ ಭಟ್ಕಳ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸರ್ಪನಕಟ್ಟೆಯ ಮೋಹನ ನಾಯ್ಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ಇಬ್ಬರನ್ನು ಭಟ್ಕಳ ಶಹರ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರನ್ನು ಮಾದೇವ ದುರ್ಗಪ್ಪ ನಾಯ್ಕ ಹನುಮಾನ ನಗರ ಹಾಗೂ ಆತನ ಸಹೋದರ ಈಶ್ವರ ದುರ್ಗಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಹಿಂದೂ ಜಾಗರಣಾ ವೇದಿಕೆಯ ಉತ್ತರಪ್ರಾಂತ ಸಂಚಾಲಕ ಗೋವಿಂದ ನಾಯ್ಕ ಸೇರಿದಂತೆ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಗೋವಿಂದ ನಾಯ್ಕರ ಸಿದ್ದಾಪುರ ಲೈಂಗಿಕ ಹಗರಣವನ್ನೊಳಗೊಂಡ ದಿನಪತ್ರಿಕೆಯನ್ನು ಮೋಹನ ನಾಯ್ಕ ಇತರರಿಗೆ ಹಂಚಿದ್ದಾನೆ ಎಂದು ಆರೋಪಿಸಿ, ಮೋಟಾರ್ ಬೈಕ್ ಬಳಸಿ ಸಹೋದರಿಯನ್ನು ತಲಗೋಡಿನ ಆಕೆಯ ಮನೆಗೆ ಬಿಟ್ಟು ಮನೆಗೆ ವಾಪಸ್ಸಾಗುವ ಸಂದರ್ಭದಲ್ಲಿ ಹಲ್ಲೆ ನಡೆಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.ಈತನ ಬಲ ತೊಡೆಗೆ ಬಲವಾದ ಏಟು ಬಿದ್ದಿದ್ದು, ಚಿಕಿತ್ಸೆ ಮುಂದುವರೆದಿದೆ. ಡಿವಾಯ್ಎಸ್ಪಿ ವೇದಮೂರ್ತಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಭೇಟಿ: ಬಿಜೆಪಿ ಹಾಗೂ ಹಿಂದೂ ಸಂಘಟನೆಯಲ್ಲಿ ಪ್ರಮುಖ ಕಾರ್ಯಕರ್ತನಾಗಿರುವ ಮೋಹನ ನಾಯ್ಕನ ಮೇಲೆ ಹಲ್ಲೆ ನಡೆಸಿದ ಸುದ್ದಿ ತಾಲೂಕಿನಲ್ಲಿ ಹರಡುತ್ತಿದ್ದಂತೆಯೇ ತಾಲೂಕಿನ ವಿವಿಧ ಮೂಲೆಯ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಇಲ್ಲಿಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಭಟ್ಕಳ ತಾಲೂಕು ಪಂಚಾಯತ ಅಧ್ಯಕ್ಷ ಗೌರಿ ಮೊಗೇರ, ಉಪಾಧ್ಯಕ್ಷ ಮಾದೇವ ನಾಯ್ಕ, ಸದಸ್ಯ ಪರಮೇಶ್ವರ ದೇವಾಡಿಗ, ಪುರಸಭಾ ಸದಸ್ಯ ಕೃಷ್ಣ ನಾಯ್ಕ ಆಸರಕೇರಿ, ದೀಪಕ ನಾಯ್ಕ, ಮಂಜುನಾಥ ನಾಯ್ಕ ಬೈಲೂರು ಭೇಟಿ ನೀಡಿದವರಲ್ಲಿ ಪ್ರಮುಖರಾಗಿದ್ದಾರೆ.
ನಗರ ಬಿಜೆಪಿ ಖಂಡನೆ: ಬಿಜೆಪಿ ಪ್ರಮುಖ ಮೋಹನ ನಾಯ್ಕರ ಮೇಲೆ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಹಲ್ಲೆ ನಡೆಸಿರುವುದನ್ನು ಭಟ್ಕಳ ಬಿಜೆಪಿ ನಗರ ಘಟಕ ಖಂಡನೆಯನ್ನು ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನಗರ ಘಟಕದ ಪ್ರಧಾನ ಕಾರ್ಯದರ್ಶಿ ದೀಪಕ ನಾಯ್ಕ, ಇದೊಂದು ಅವಮಾನವೀಯ ಕೃತ್ಯವಾಗಿದ್ದು ನಾಘರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ.
ವರದಿ: ವಸಂತ ದೇವಾಡಿಗ, ಭಟ್ಕಳ